*ಬ್ಯಾಂಕರ್ಸ್ ಮತ್ತು ಹಣಕಾಸು ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಪೊಲೀಸ್ ಆಯುಕ್ತರ ಸಭೆ:*
*ಬ್ಯಾಂಕ್,ಎ.ಟಿ.ಎಂ.ಗಳಿಗೆ ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳುವಂತೆ ಸೂಚನೆ*
ಕಲಬುರಗಿ,ಜ.20(ಕರ್ನಾಟಕ ವಾರ್ತೆ) ಇಲ್ಲಿನ ಪೊಲೀಸ್ ಭವನದಲ್ಲಿ ಕಲಬುರಗಿ ನಗರದ ಬ್ಯಾಂಕ್ ಮ್ಯಾನೇಜರ್ ಮತ್ತು ಹಣಕಾಸು ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಇತ್ತೀಚೆಗೆ ಸಭೆ ನಡೆಸಿದ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಅವರು ಬ್ಯಾಂಕ್ ಮತ್ತು ಎ.ಟಿ.ಎಂ ಗಳಿಗೆ ನುರಿತ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಂತೆ ಸೂಚನೆ ನೀಡಿದರು.
ಇತ್ತೀಚೆಗೆ ಬ್ಯಾಂಕ್, ಎ.ಟಿ.ಎಂ. ದರೋಡೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿ ನಗರದ ಎಲ್ಲಾ ಬ್ಯಾಂಕ್, ಕೋ-ಆಪರೇಟಿವ್ ಸೊಸೈಟಿ ಹಾಗೂ ವಿವಿಧ ಹಣಕಾಸು ಸಂಸ್ಥೆಗಳ ವ್ಯವಸ್ಥಾಪಕರ ಸಭೆ ನಡೆಸಿದ ಅವರು ಬ್ಯಾಂಕ್ ಮತ್ತು ಎ.ಟಿ.ಎಮ್ ಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ, ಬಲ್ಗರಿ ಅಲಾರ್ಮ್, ಮೋಷನ್ ಡಿಟೆಕ್ಟರ್ ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಮತ್ತು ಬ್ಯಾಂಕನಿಂದ ಎ.ಟಿ.ಎಂಗಳಿಗೆ ಹಣವನ್ನು ಕಳುಹಿಸುವಾಗ ಕಡ್ಡಾಯವಾಗಿ ಆಯುಧದೊಂದಿಗೆ ನುರಿತ ಭದ್ರತಾ ಸಿಬ್ಬಂದಿಯನ್ನು ಕಳುಹಿಸುವಂತೆ ಸೂಚಿಸಿದರು.
ಇನ್ನು ಖಾಸಗಿ ಸಂಸ್ಥೆಗಳಿಂದ ಭದ್ರತಾ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಪೂರ್ವದಲ್ಲಿ ಕಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರ ಸಲ್ಲಿಸಿದವರನ್ನು ಮಾತ್ರ ನೇಮಿಸಿಕೊಳ್ಳಬೇಕೆಂದು ನಿರ್ದೇಶನ ನೀಡಿದರು.
ಬ್ಯಾಂಕ್, ಕೋ-ಆಪರೇಟಿವ್ ಸೊಸೈಟಿ, ಹಣಕಾಸು ಸಂಸ್ಥೆಗಳಲ್ಲಿ ಸೈಬರ್ ಅಪರಾಧಗಳ ಕುರಿತ ಪೊಸ್ಟರ್ಗಳನ್ನು ತಮ್ಮ ಕಚೇರಿ ಆವರಣಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಪೊಲೀಸ್ ಸಿಬ್ಬಂದಿ ಭದ್ರತಾ ದೃಷ್ಠಿಯಿಂದ ಹೆಚ್ಚಿನ ಗಸ್ತು ನಿರ್ವಹಿಸಬೇಕು. ತುರ್ತು ಸಂದರ್ಭದಲ್ಲಿ ಸಹಾಯವಾಣಿ 112ಗೆ ಕರೆ ಮಾಡಿ ದೂರು ಸಲ್ಲಿಸಬಹುದೆಂದು ಡಾ.ಎಸ್.ಡಿ.ಶರಣಪ್ಪ ತಿಳಿಸಿದರು.
ಸಭೆಯಲ್ಲಿ ಡಿ.ಸಿ.ಪಿ ಕನಿಕಾ ಸಿಕ್ರಿವಾಲ್ ಸೇರಿದಂತೆ ಬ್ಯಾಂಕ್ ಅಧಿಕಾರಿಗಳು ಹಾಗೂ ಇತರೆ ಪೊಲೀಸ್ ಅಧಿಕಾರಿಗಳಿದ್ದರು.
Post a Comment